Home | Well Wishes | ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ

ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ

Font size: Decrease font Enlarge font



ಆರನೇ ಶತಮಾನವನ್ನು ಇಂಗ್ಲಿಷ್‌ ಇತಿಹಾಸಕಾರರು ದಿ. ಡಾರ್ಕ್‌ ಏಜ್‌ ಎಂದು ಕರೆದಿದ್ದರು. ಕಗ್ಗತ್ತಲ ಯುಗವೆಂಬ ಹೆಸರಿಗೆ ಅಂದಿನ ಪರಿಸ್ಥಿತಿ ಅಷ್ಟೊಂದು ಹೊಂದಿಕೊಂಡಿತ್ತು. ಹೆಸರಿನಲ್ಲಿ ಮಾತ್ರ ಅವರು ಮಾನವರಾಗಿದ್ದರು. ಮಾನವ ಎಂಬ ಅರ್ಥವ್ಯಾಪ್ತಿಗೊಳಪಡುವ ಎಲ್ಲಾ ಒಳಿತುಗಳಿಂದಲೂ ಅವರು ದೂರವೇ ಉಳಿದಿದ್ದರು. ಧರ್ಮ, ನ್ಯಾಯ, ವಾತ್ಸಲ್ಯ, ವಿಶ್ವಾಸ ಅವರ ಪಾಲಿಗೆ ಅನನ್ಯವಾಗಿತ್ತು. ತಮಗೆ ತೋಚಿದಂತೆ ಬದುಕಿ ಇದೇ ಜೀವನ ಎಂದು ತೀರ್ಮಾನಿಸಿಬಿಟ್ಟಿದ್ದರು. ಅಧರ್ಮ, ಅನ್ಯಾಯ, ಕಂದಾಚಾರ, ಮೂಢನಂಬಿಕೆಗಳು ತಾಂಡವವಾಡುತ್ತಿದ್ದವು. ತಮಗಿರುವ ಕರ್ತವ್ಯಗಳನ್ನೆಲ್ಲ ಮರೆತು ಮೃಗ ಸಮಾನ ಜೀವನ ನಡೆಸುತ್ತಿದ್ದರು ಜನಿಸಿದ ಮಗು ಹೆಣ್ಣಾಗಿದ್ದರೆ ಜೀವಂತವಾಗಿ ಹೂಳುತ್ತಿದ್ದರು. ಯಾಕೆಂದರೆ ಅಂದಿನ ಶತಮಾನದಲ್ಲಿ ಹೆಣ್ಣು ಅವರ ಪಾಲಿಗೆ ಅವಮಾನವಾಗಿತ್ತು. ಗಂಡು ಮಗು ಜನಿಸಿದರೆ ಅವರ ಮುಖ ಪ್ರಸನ್ನವಾಗುತ್ತಿತ್ತು. ಹೆಣ್ಣು ಮಗು ಜನಿಸಿದರೆ ಅವರ ಮುಖ ಕಪ್ಪಿಡುತ್ತಿತ್ತು. ಅವಮಾನ ತಾಳಲಾರದೆ ಆ ಕಂದಮ್ಮಗಳನ್ನು ಜೀವಂತ ಹೂಳಿ ಕ್ರೂರತೆ ಮೆರೆಯುತ್ತಿದ್ದರು. ನಾವಿಕನಿಲ್ಲದ ದೋಣಿಯಂತೆ ಆ ಸಮುದಾಯ ದಿಕ್ಕು ತಪ್ಪಿ ಚಲಿಸುತ್ತಿತ್ತು. ಅದು ಕ್ರಿಸ್ತ ಶಕ 571ನೇ ಇಸವಿ ಏಪ್ರಿಲ್‌ ತಿಂಗಳಾಗಿತ್ತು. ಅಲ್ಲಿನ ಕುಲೀನ ಮನೆತನದ ಅಬ್ದುಲ್ಲಾ (ರ) ಹಾಗೂ ಆಮಿನಾ ಬೀವಿ (ರ) ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು. ಅದ್ಭುತವೆಂದರೆ ಆ ಮಗು ಸಾಷ್ಟಾಂಗವೆರಗುವ ರೀತಿಯಲ್ಲಿ ಜನಿಸಿತು. ಇತರ ಮಹಿಳೆಯರಿಗೆ ಸಾಮಾನ್ಯವೆಂಬಂತೆ ಇರುವ ಹೆರಿಗೆ ನೋವು ಆಮಿನಬೀವಿ (ರ) ರವರ ಗಮನಕ್ಕೆ ಬರಲಿಲ್ಲ.
 
ಈ ಮಗು ಗರ್ಭದಲ್ಲಿರುವಾಗಲೂ ತಾಯಿ ಅಮಿನ್‌ ಬೀವಿಗೆ ಒಂದು ಅದ್ಭುತ ಘಟನೆ ದರ್ಶನವಾಗಿತ್ತು. ಅವರಿಂದ ಹೊರಟ ಅದ್ಭುತ ಪ್ರಭೆಯಿಂದಾಗಿ ಬುಸ್‌ರಾ ಎಂಬ ಪಟ್ಟಣ ಸಂಪೂರ್ಣ ಗೋಚರಿಸಿತ್ತು. ಮಗು ಜನಿಸಿದಾಗ ಇಡೀ ಮನುಕುಲವೇ ಬೆರಗುಗೊಳ್ಳುವಂತಹಾ ವಿಸ್ಮಯ ಘಟನೆಗಳು ಪ್ರಪಂಚದೆಲ್ಲೆಡೆ ನಡೆದಿದ್ದವು. ಕಿಸ್‌ರಾ - ಕೈಸರ್‌ ಚಕ್ರವರ್ತಿಗಳ ಭವ್ಯ ಅರಮನೆ ಭಯಾನಕ ಶಬ್ದದೊಂದಿಗೆ ಕಂಪಿಸಿತು ಅದರ ಹದಿನಾಲ್ಕು ಬೃಹತ್‌ ಗೋಡೆಗಳು ನುಚ್ಚು ನೂರಾಗಿದ್ದವು. ಅಸತ್ಯದ ಕೋಟೆಗಳನ್ನು ಬೇಧಿಸಿ ಸತ್ಯ ಸಂದೇಶವನ್ನು ಪ್ರಪಂಚದಲ್ಲೆಡೆಗೆ ಹಬ್ಬಿಸಲಿರುವ ಒಂದು ಸೂಚನೆ ಇದಾಗಿತ್ತು.
ಈ ವಿಶಿಷ್ಟ ಮಗುವಿನ ತಂದೆ, ಮಗು ಗರ್ಭದಲ್ಲಿರುವಾಗಲೇ ಮರಣ ಹೊಂದಿದ್ದರು. ಮಗು ತಬ್ಬಲಿಯಾಗಿ ಜನಿಸಿತು. ಮಗುವಿಗೆ ಮುಹಮ್ಮದ್‌ ಎಂದು ನಾಮಕರಣ ಮಾಡಲಾಯಿತು. ಆಶ್ಚರ್ಯಕರ ಸಂಗತಿಯೆಂದರೆ ಜಗತ್ತಿನಲ್ಲಿ ಆ ತನಕ ಮುಹಮ್ಮದ್‌ ಎಂಬ ಹೆಸರಿನ ಯಾವೊಬ್ಬರೂ ಇರಲಿಲ್ಲ. ಇದನ್ನು ವಿಶ್ವ ಇತಿಹಾಸಕಾರರು ದಾಖಲಿಸಿದ್ದಾರೆ. ಈ ವಿಶಿಷ್ಟ ನಾಮ ನಂತರ ಎಷ್ಟೊಂದು ಪ್ರಸಿದ್ಧಿ ಪಡೆಯಿತೆಂದರೆ ಇಂದಿನ 21ನೇ ಶತಮಾನದಲ್ಲಿ ಮುಹಮ್ಮದ್‌ ಎಂಬ ಹೆಸರು ಜಗತ್ತಿನಲ್ಲಿ ಒಂದನೇ ಸ್ಥಾನದಲ್ಲಿದೆ. ಅತ್ಯಂತ ಹೆಚ್ಚು ಜನರಿಗಿರುವ ಹೆಸರು ಮುಹಮ್ಮದ್‌ ಎಂದಾಗಿದೆ!.
ಮುಹಮ್ಮದ್‌ ಎಂಬ ಈ ಮಗು ಜನಿಸುವಾಗಲೇ ಮುಂಜಿ ಕರ್ಮ ನಿರ್ವಹಿಸಲ್ಪಟ್ಟ ರೀತಿಯಲ್ಲಿದ್ದುದು ಮತ್ತೊಂದು ಅದ್ಭುತವಾಗಿತ್ತು. ಮಗು, ತಾಯಿ ಹಾಗೂ ತಾತ ಅಬ್ದುಲ್ಲ ಮುತ್ತಲೀಬರ ಆರೈಕೆಯಲ್ಲಿ ಬೆಳೆಯಿತು. ಮಗವಿಗೆ ಆರು ವರ್ಷ ಪ್ರಾಯವಾದಾಗ ತಾಯಿ ಅಮಿನ ಬಿವಿ ಮರಣ ಹೊಂದಿದರು. ಮಗು ತಾತನ ಪೋಷಣೆಯಲ್ಲಿ ಬೆಳೆದು ಯೌವ್ವನ ಪ್ರಾಯಕ್ಕೆ ತಲುಪಿತು. ಮಕ್ಕಳ ಸಹಜ ಚೇಷ್ಟೆಗಳಿಂದೆಲ್ಲ ದೂರವಿದ್ದು ಮಹಮ್ಮದ್‌ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ವಿಶಿಷ್ಟ ರೀತಿಯಲ್ಲಿ ಬೆಳೆದು ಬಂದರು. ವಂಚನೆ, ಸುಳ್ಳು, ಕಾಪಟ್ಯ ಇಲ್ಲದ ನಿಷ್ಕಳಂಕ ವ್ಯಕ್ತಿಯಾಗಿರುವುದರಿಂದ ಇಡೀ ಜನತೆ ಅವರನ್ನು ಅಲ್‌ ಅಮೀನ್‌ (ನಂಬಿಕಸ್ಥ) ಎಂಬ ವಿಶೇಷ ನಾಮದಿಂದ ಕರೆದರು. 25ನೇ ವರ್ಷದಲ್ಲಿ ಖದೀಜ ಬೀವಿ ಎಂಬ ಮಹಿಳೆಯನ್ನು ವಿವಾಹವಾದರು. 40ನೇ ವರ್ಷ ಪ್ರಾಯಕ್ಕೆ ತಲುಪಿದಾಗ ಮಹಮ್ಮದ್‌ ಸ್ವಲ್ಲಲ್ಲಾಹು ಅಲೈಹಿವಲ್ಲಮರಿಗೆ ಏಕಾಂತವಾಸ ಇಷ್ಟವಾಯಿತು. ಮಕ್ಕಾದ ಹಿರಾ ಪರ್ವತದ ಗುಹೆಯಲ್ಲಿ ಅಲ್ಲಾಹುವಿನ ಧ್ಯಾನದಲ್ಲಿ ನಿರತರಾಗಿರುವಾಗ ಜಿಬ್‌ರೀಲ್‌ ಎಂಬ ದೇವದೂತರು ಬಂದು ಖುರಾನ್‌ ಗ್ರಂಥದ ಪ್ರಥಮ ಸೂಕ್ತ ಓದಿಕೊಟ್ಟರು. ಈ ರೀತಿ ಖುರಾನ್‌ ಪ್ರಥಮವಾಗಿ ಅವತೀರ್ಣಗೊಂಡಿತು.
 
ನಂತರ ಸಾಂದರ್ಭಿಕ ಔಚಿತ್ಯಕ್ಕನುಗುಣವಾಗಿ 23 ವರ್ಷಗಳಲ್ಲಿ ಖುರಾನ್‌ ಸಂಪೂರ್ಣವಾಗಿ ಅವತೀರ್ಣಗೊಂಡಿತು. ಇದು ಸೃಷ್ಟಿ ಕರ್ತ ಅಲ್ಲಾಹುವಿನ ವಚನಗಳಾಗಿವೆ. ಇಸ್ಲಾಂ ಧರ್ಮ ಭೂಮಿಯಲ್ಲಿ ಮಾನವವಾಸ ಆರಂಭವಾಗುವಾಗಲೇ ಅಲ್ಲಾಹುವಿನಿಂದ ಸ್ಥಾಪನೆಗೊಂಡಿತ್ತು. ಪ್ರಥಮ ಪ್ರಚಾರಕರಾಗಿ ಆದಿಪಿತ ಪ್ರಪ್ರಥಮ ಮಾನವ ಆದಂ ನೇಮಕಗೊಂಡಿದ್ದರು. ನಂತರ ವಿವಿಧ ಕಾಲದಲ್ಲಿ 1,24,000 ಪ್ರವಾದಿಗಳು ಆಗಮಿಸಿದರು. ಪ್ರವಾದಿ ಶೃಂಖಲೆಯ ಕೊನೆಯ ಕೊಂಡಿಯಾಗಿ ವಿಶ್ವಪ್ರವಾದಿ ಲೋಕಾನುಗ್ರಹಿ ಮುಹಮ್ಮದ್‌ ಸ್ವಲ್ಲಲ್ಲಾಹು ಅಲೈಹಿನವ ಸಲ್ಲಂ ನೇಮಕಗೊಂಡರು. ಕೆಲವರು ತಿಳಿದಂತೆ ಪ್ರವಾದಿ ಮುಹಮ್ಮದ್‌ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ಇಸ್ಲಾಂ ಧರ್ಮದ ಸ್ಥಾಪಕರಲ್ಲ. ಕೇವಲ ಪ್ರಚಾರಕರು ಮಾತ್ರ. ಇಸ್ಲಾಂ ಧರ್ಮ ಮಾನವ ನಿರ್ಮಿತ ಧರ್ಮವಲ್ಲ. ಇಸ್ಲಾಂ ಧರ್ಮ ಅಖಿಲ ಬ್ರಹ್ಮಾಂಡ - ಸೃಷ್ಟಿ - ಸಂಚಾರ ಕರ್ತನಾದ ಅಲ್ಲಾಹು ಸ್ಥಾಪಿಸಿರುವ ಪ್ರಕೃತಿ ಧರ್ಮವಾಗಿದೆ.
 
ಅರಬಿಕ್‌ ಕ್ಯಾಲೆಂಡರಿನ ಈ ತಿಂಗಳು ಪ್ರವಾದಿ ಮಹಮ್ಮದರ ಜನ್ಮ ದಿನದ ತಿಂಗಳಾಗಿದೆ. ರಬೀವುಲ್‌ ಅವ್ವಲ್‌ (ಪ್ರಥಮ ವಸಂತ) ಎಂಬರ್ಥವಿರುವ ಈ ತಿಂಗಳು ಪ್ರವಾದಿ ಗುಣಗಾನ, ಪ್ರವಾದಿ ಸಂದೇಶ ಪ್ರಚಾರ ಮಾಡುವ ಮಹತ್ವಪೂರ್ಣ ತಿಂಗಳಾಗಿದೆ. ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಈದ್‌ ಮಿಲಾದ್‌ ಆಚರಿಸುವುದನ್ನು ಕಾಣಬಹುದು. ಈಜಿಪ್ಟ್‌ನಲ್ಲಿ ಅಂತರಾಷ್ಟ್ರೀಯ ಮಿಲಾದ್‌ ಕಾನ್ಫರೆನ್ಸ್‌ ಪ್ರತಿವರ್ಷವೂ ಅದ್ದೂರಿಯಾಗಿ ನಡೆಯುತ್ತಿದೆ. ಈಜಿಪ್ಟ್‌ ಅಧ್ಯಕ್ಷ ಹುಸ್ನಿ ಮುಬಾರಕ್‌ ನಾಯಕತ್ವದಲ್ಲಿ ನಡೆಯುವ ಈ ಮಹಾ ಸಂಗಮದಲ್ಲಿ ತಾಜುಲ್‌ ಉಲಮಾ ಉಳ್ಳಾಲ ತಂಙಳ್‌ ಹಾಗೂ ಖಮರುಲ್‌ ಉಲಮಾ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಕಾಂತಪುರಂ ಭಾಗವಹಿಸಿದ್ದಾರೆ. ಮೊರೊಕ್ಕೊ, ಲಿಬಿಯಾ, ಲಂಡನ್‌, ಅಮೆರಿಕ, ಜಪಾನ್‌, ಸಿರಿಯ, ಇಂಡೋನೇಷ್ಯಾ, ಮಲೇಶ್ಯಾ ಸಹಿತ ಜಗತ್ತಿನ 200ಕ್ಕಿಂತಲೂ ಹೆಚ್ಚು ರಾಷ್ಟ್ರಗಳಲ್ಲೆಲ್ಲ ವಿಜೃಂಭಣೆಯ ಈದ್‌ ಮಿಲಾದ್‌ ಆಚರಣೆ ನಡೆಯುತ್ತಿದೆ.
 
ಭಾರತದ ಗ್ರಾಮೀಣ ಪ್ರದೇಶದಿಂದ ಹಿಡಿದು ರಾಜಧಾನಿ ದೆಹಲಿಯ ತನಕ ಈದ್‌ ಮಿಲಾದ್‌ ಕಂಪು ಹರಡುತ್ತಿದೆ. ಈದ್‌ ಮಿಲಾದ್‌ ಅಂಗವಾಗಿ ಬೃಹತ್‌ ಮೆರವಣಿಗೆ, ಮೌಲಿದ್‌ ಪಾರಾಯಣ, ಸಾರ್ವಜನಿಕ ಸಮಾರಂಭಗಳು ನಡೆಯುತ್ತಿದೆ. ಸಣ್ಣ ಒಂದು ವಿಭಾಗ ಈ ಸದಾಚಾರವನ್ನು ವಿರೋಧಿಸಿ ಮಿಲಾದುನ್ನೆಬಿಯನ್ನೇ ಅನಿಸ್ಲಾಮಿಕ ಎಂದು ಸಾರುವುದನ್ನೂ ಕಾಣಬಹುದು. ಆದರೆ ಪ್ರವಾದಿ ಗುಣಗಾನ (ಮೌಲಿದ್‌) ಮಾಡುವಂತೆ ಪವಿತ್ರ ಖುರಾನ್‌ನಲ್ಲಿ ಅಲ್ಲಾಹು ಸ್ಪಷ್ಟವಾಗಿ ಹೇಳಿದ್ದಾನೆ. ಮೌಲ್ಯಯುತ ಜೀವನ ನಡೆಸಿ, ಮಾನವೀಯ ಮೌಲ್ಯಗಳ ಸಂರಕ್ಷಕರಾಗಿ, ವಿಶ್ವಭಾತೃತ್ವ, ಶಾಂತಿ ಸೌಹಾರ್ದತೆ. ಮಾನವ ಐಕ್ಯತೆಯ ಪ್ರತಿಪಾದಕರಾಗಿ ಜೀವಿಸಲು ಕರೆ ಕೊಡುವುದೇ ಈದ್‌ ಮಿಲಾದ್‌ ಸಂದೇಶ. ಮಹಿಳೆಯರಿಗೆ ಮಹೋನ್ನತ ಸ್ವಾತಂತ್ರ್ಯ ನೀಡಿದ, ಅಂಧಕಾರ ಯುಗವನ್ನು ಪ್ರಜ್ವಲ ಬೆಳಕಿನ ಯುಗವನ್ನಾಗಿ ಪರಿವರ್ತಿಸಿದ, ಕರಿಯ - ಬಿಳಿಯ, ಬಡವ - ಧನಿಕ, ರಾಜ - ಪ್ರಜೆ ಎಂಬ ತಾರತಮ್ಯ ಮಾಡದೆ ಸರ್ವ ಮನುಷ್ಯರೂ ಒಂದೇ ತಂದೆತಾಯಂದಿರ ಮಕ್ಕಳು ಎಂದು ಜಗತ್ತಿಗೆ ಸಾರಿದ ಲೋಕಾನುಗ್ರಹಿ, ವಿಶ್ವಪ್ರವಾದಿ ಮುಹಮ್ಮದ್‌ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂರ ಜನ್ಮ ದಿನಾಚರಣೆ ಜಗತ್ತಿಗೆ ಸರ್ವ ಮಾನವರಿಗೂ ಐಶ್ವರ್ಯವನ್ನು ತರಲಿ.

Comments (2 posted):

Abdullah on 25 February, 2010 09:22:17
avatar
Igiptian president who is not ruling his country by Islamic law is not a Muslim! If he practices the MILAD that's a damn pure joke!If you're exagerating his this greate(!)job saying two Keralian Moulavis participating this event you're a smart Zahil!(uneducated/civilized tribal man)May Allah guide you to follow His messenger,Muhammed(sallallahu alaihi va sallam)
Yu on 26 February, 2010 06:21:24
avatar
Mr. Reporter,
did prophet Mohammed (peace be upon him) ever celebrate his predecessors MOULUD in his lifetime? or whether he directed his followers to celebrate HIS moulud?
If any kindly provide us proper link.

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org