ಮಂಡ್ಯ:ಸಮ್ಮೇಳನವನ್ನು ಹಾಳುಗೆಡವಲು ಯತ್ನಿಸಿದ ಮತಾಂಧರು
ಮಂಡ್ಯ, ಫೆಬ್ರವರಿ ೨೪: ಎಂಎಫ್ ಹುಸೇನ್ ಕಲಾಕೃತಿ, ಸಹಮತ್ ನ ಸೌಹಾರ್ದ ನಾಟಕ, ಸಮುದಾಯ ಜಾಥಾ, ರಂಜನೀಯ ಸಿನಿಮಾ, ಮುದ ನೀಡುವ ಸಂಗೀತ ಅಷ್ಟೇ ಏಕೆ ಬಾಂಧವ್ಯ ಬೆಸೆಯುವ ಕ್ರೀಡೆ...... ಉಹುಂ.......ಇವ್ಯಾವು ಮತಾಂಧರ ಸಂಘ ಪರಿವಾರದವರ ಶಬ್ದಕೋಶದಲ್ಲಿ ಇಲ್ಲವೇ ಇಲ್ಲ.
ಹಾಗಾಗಿಯೇ ಮಂಡ್ಯದಲ್ಲಿ 11ನೇ ಸಿಐಟಿಯು ಸಮ್ಮೇಳನಕ್ಕಾಗಿ ಸುಂದರವಾಗಿ ಹಾಕಲಾಗಿದ್ದ ಸಾಲು ಬಾವುಟಗಳು, ಬ್ಯಾನರ್ಗಳು ಅವರ ಕಣ್ಣನ್ನು ಕೆಂಪಾಗಿಸಿದವು. ಹಾಗಾಗಿಯೇ ರಾತ್ರೋರಾತ್ರಿ ಅವುಗಳನ್ನೆಲ್ಲಾ ಕಿತ್ತು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸಿದ್ದರು.
ಮೊದಲನೆ ದಿನ ಉದ್ಘಾಟನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಅಂತ್ಯಗೊಂಡಿತ್ತು. ಸಮ್ಮೇಳನದ ಕ್ಯಾಂಪಸ್ ತುಂಬೆಲ್ಲಾ ದಿನವಿಡೀ ಹಾಡು ಘೋಷಣೆಗಳು ಮೇಳೈಸಿದ್ದವು. ಆದರೆ 13 ರ ಬೆಳಿಗ್ಗೆ 4 ಗಂಟೆಗೆ ಹೊರಗಡೆ ಹಾಕಲಾಗಿದ್ದ 11ನೇ ಸಮ್ಮೇಳನದ ದೊಡ್ಡ ಬಾವುಟಗಳು ಹಾಗೂ ``ವಿಶ್ವದ ಕಾರ್ಮಿಕರೇ ಒಂದಾಗಿ, ಕಳೆದು ಕೊಳ್ಳುವುದು ಏನೂ ಇಲ್ಲ. ಕಾಲಿಗೆ ಕಟ್ಟಿದ ಸಂಕೋಲೆಯನ್ನು ಹೊರತುಪಡಿಸಿ" ಎಂಬ ಕಾರ್ಲ್ ಮಾರ್ಕ್ಸರವರ ವಿಶ್ವ ಪ್ರಸಿದ್ಧ ಹೇಳಿಕೆಯ ಬೃಹತ್ ಬ್ಯಾನರ್ ನಾಪತ್ತೆಯಾಗಿದ್ದವು. ಆದರೆ ಬಾವುಟಗಳನ್ನು ಹಾಕಿದ್ದ ಮರದ ಕಂಬಗಳು ಮಾತ್ರ ಹಾಗೆಯೇ ಸ್ತಬ್ದವಾಗಿ ನಿಂತು ಕಿಡಿಗೇಡಿಗಳ ಕೃತ್ಯಕ್ಕೆ ಸಾಕ್ಷಿಯಾಗಿದ್ದವು. ಬಾವುಟಗಳನ್ನು ಕಿತ್ತೊಗೆಯುವ ಕೃತ್ಯದ ಹಿಂದೆ ಯಾರಿದ್ದಾರೆಂಬುದು ತಕ್ಷಣವೇ ಎಲ್ಲರಿಗೂ ಕ್ಷಣಾರ್ಧದಲ್ಲಿಯೇ ಗೊತ್ತಾಗಿತ್ತು. ಸ್ಥಳೀಯ ಜನರನ್ನು ಬಳಸಿ ಸಂಘ ಪರಿವಾರವೇ ಈ ಕೃತ್ಯದ ನೇತೃತ್ವ ವಹಿಸಿತ್ತು ಎನ್ನುವುದು ಜಗಜಾಹೀರಾಗಿತ್ತು. ಆ ಮೂಲಕ 3 ದಿನಗಳ ಸಮ್ಮೇಳನವನ್ನು ಹಾಳುಗೆಡವಲು ಯತ್ನಿಸಿದ್ದರು.
ಆದರೆ ಸಿಐಟಿಯು ನಾಯಕತ್ವ ಮಾತ್ರ ಅಂತಹ ಯಾವುದೇ ಪ್ರಚೋದನೆಗೆ ಅವಕಾಶ ನೀಡದೆ ತಾಳ್ಮೆ ವಹಿಸಿತು. 13ರ ಬೆಳಿಗ್ಗೆ 9ಕ್ಕೆ ಸರಿಯಾಗಿ ಸಭಾಂಗಣದ ಹೊರಗೆ ಒಂದು ಪ್ರತಿಭಟನೆಯನ್ನು ನಡೆಸಿತು. ಅದರಲ್ಲಿ ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಕಾಂ.ಎಂ.ಕೆ.ಪಂಧೆ ಮಾತನಾಡಿ ತ್ಯಾಗ, ಬಲಿದಾನಗಳ ಕೆಂಬಾವುಟವನ್ನು ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಿದರು. ಮಾತ್ರವಲ್ಲ ರಾಜ್ಯ ಮುಖಂಡರೊಂದಿಗೆ ಸೇರಿ ಕೆಂಬಾವುಟಗಳನ್ನು ಹಾರಿಸಿದರು. ಕೊನೆಯಲ್ಲಿ ಸಿಐಟಿಯು ಅಧ್ಯಕ್ಷರಾದ ಕಾಂ.ಬಿ.ಮಾಧವ ಕನ್ನಡದ ಖ್ಯಾತ ಕವಿ ಗೋಪಾಲಕೃಷರ ನಾವು `ಕಟ್ಟುವೆವು ನಾವು ಹೊಸ ನಾಡೊಂದನ್ನು, ಕವನದ ಸಾಲು ಉದ್ಧರಿಸಿ ಕೆಡವುವುದಿದ್ದರೆ ಬನ್ನಿ ನಾವು ಮತ್ತೆ ಕಟ್ಟುತ್ತೇವೆ ಎನ್ನುವ ಎಚ್ಚರಿಕೆ ನೀಡಿದರು.
ವರದಿ : ಮಾಂತ
ಸೌಜನ್ಯ: ಜನಶಕ್ತಿ



del.icio.us
Digg
Comments (0 posted):
Post your comment