ಶಿವಮೊಗ್ಗ:ಪತ್ರಿಕೆಯಲ್ಲಿ ಪ್ರಕಟವಾದ ಬೇಜವಾಬ್ಧಾರಿ ಲೇಖನ. ಹಿಂಸಾರೂಪ ಪಡೆದ ಪ್ರತಿಭಟನೆಯಲ್ಲಿ ಸಾದಿಕ್ ಮತ್ತು ಲತೀಫ್ ಎಂಬ ಅಮಾಯಕರು ಪೋಲಿಸ್ ಗುಂಡಿಗೆ ಬಲಿ
.
ಶಿವಮೊಗ್ಗದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ. ಹಾಸನದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದರೆ, ರಾಜ್ಯದ ಇತರ ಹಲವು ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ನಡೆದ ಘಟನೆಯಲ್ಲಿ ಬೆಂಕಿಗೆ ಆಹುತಿಯಾದ ತರಕಾರಿ ಅಂಗಡಿಗಳು.
ಶಿವಮೊಗ್ಗ/ ಹಾಸನ: ಕನ್ನಡ ದಿನಪತ್ರಿಕೆಯೊಂದರಲ್ಲಿ ಮುಸ್ಲಿಂ ಜನಾಂಗ ವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದ ಘಟನೆ ಶಿವಮೊಗ್ಗ ಮತ್ತು ಹಾಸನಗಳಲ್ಲಿ ಸೋಮವಾರ ನಡೆದಿದ್ದು, ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಮಾಡಿದ ಗೋಲಿಬಾರ್ನಲ್ಲಿ ಶಿವಮೊಗ್ಗದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ. ಹಾಸನದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದರೆ, ರಾಜ್ಯದ ಇತರ ಹಲವು ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಿವಮೊಗ್ಗ ಗೋಲಿಬಾರ್ಗೆ ಸಿಕ್ಕಿ ಸತ್ತವರನ್ನು ಸಾದಿಕ್ (23) ಮತ್ತು ಲತೀಫ್ (25) ಎಂದು ಗುರುತಿಸಲಾಗಿದೆ. ಉದ್ರಿಕ್ತ ಗುಂಪು ನಗರದಲ್ಲಿ ಮಧ್ಯಾಹ್ನ ಹಚ್ಚಿದ ಬೆಂಕಿಗೆ 19ಕ್ಕೂ ಹೆಚ್ಚು ಮೋಟಾರ್ ಬೈಕ್ಗಳು, 2 ಟೆಂಪೋ ಟ್ರ್ಯಾಕ್ಸ್ ಆಹುತಿಯಾಗಿ, 1 ಕಾರು ಜಖಂಗೊಂಡಿದೆ. ನಗರದಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಮೂವರು ಪತ್ರಕರ್ತರು ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ.
ಹಾಸನದಲ್ಲಿ ಕೇವಲ ಒಂದು ಗಂಟೆ ಅವಧಿಯಲ್ಲಿ ಕೋಮು ಗಲಭೆ ಭುಗಿಲೆದ್ದು, ಘಟನೆಯಲ್ಲಿ ಐವರು ಪೊಲೀಸರು ಸೇರಿದಂತೆ 13 ಜನ ಗಾಯಗೊಂಡರು. ಪೊಲೀಸ್ ಜೀಪ್, 3 ಆಟೊ, 17 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರೆ, 43 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಲೇಖನಕ್ಕೆ ವಿರೋಧ: ಪತ್ರಿಕಾ ಲೇಖನ ದಲ್ಲಿ ಮಹಮದ್ ಪೈಗಂಬರ್ ಅವರನ್ನು ಹೀಗಳೆಯಲಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದವರು ಸಭೆ ನಡೆಸಿದರು.
ನಂತರ ಅವರೆಲ್ಲ ಗುಂಪಾಗಿ ತೆರಳುತ್ತಿದ್ದ ವೇಳೆ ಕಿಡಿಗೇಡಿಗಳು ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಅಂಗಡಿಗಳಿಗೆ ಕಲ್ಲು ತೂರಿದರು. ಗುಂಪು ಅಮಿರ್ ಅಹಮದ್ ವೃತ್ತಕ್ಕೆ ಬರುತ್ತಿದ್ದಂತೆ ತೀವ್ರ ಸ್ವರೂಪ ತಾಳಿತು. ತಕ್ಷಣ ನೆಹರು ರಸ್ತೆ ಹಾಗೂ ಬಿ.ಎಚ್. ರಸ್ತೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ಗಳಿಗೆ ಬೆಂಕಿ ಹಚ್ಚಿದರು. ಸಾರಿಗೆ ಸಂಸ್ಥೆ ಬಸ್ಗೆ ಕಲ್ಲು ತೂರಿದರು.
ಅಂಗಡಿಗಳ ಗ್ಲಾಸ್ ಪುಡಿ ಮಾಡಿದರು. ಅದೇ ರಸ್ತೆಯಲ್ಲಿದ್ದ ಟೆಂಪೊ ಟ್ರ್ಯಾಕ್ಸ್ಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಬರುತ್ತಿದ್ದಂತೆ ಚದುರಿದ ಗುಂಪು ಪಕ್ಕದ ಕೆ.ಆರ್. ಪುರಂ ರಸ್ತೆ, ಗಾಂಧಿ ಬಜಾರ್ನಲ್ಲಿದ್ದ ಅಂಗಡಿ, ವಾಹನ ಗಳನ್ನು ಜಖಂಗೊಳಿಸಿದರು. ದುಷ್ಕ ರ್ಮಿಗಳು ಗಾಂಧಿ ಬಜಾರ್ನಲ್ಲಿನ ಹತ್ತಾರು ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚಿದರು.
ಪತ್ರಕರ್ತರ ಮೇಲೆ ಹಲ್ಲೆ: ಉದ್ರಿಕ್ತರು ಖಾಸಗಿ ವಾಹಿನಿ ವರದಿಗಾರ ರಾಜೇಶ್ ಕಾಮತ್ ಮತ್ತು ಪತ್ರಿಕೆಯೊಂದರ ಛಾಯಾಗ್ರಾಹಕ ನಿಂಗನಗೌಡ ಅವರ ಮೇಲೆ ಹಲ್ಲೆ ನಡೆಸಿದರು. ರಾಜೇಶ್ ಅವರ ತಲೆಗೆ ಕಲ್ಲೇಟು ಬಿದ್ದರೆ, ನಿಂಗನಗೌಡ ಅವರ ಎದೆಗೆ ಕಲ್ಲೇಟು ಬಿದ್ದಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಗುಂಪು, ಜನರ ಮೇಲೂ ಕಲ್ಲು ತೂರಾಟ ನಡೆಸಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ತಿಳಿಸಿದ್ದಾರೆ.
ಹಾಸನದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ - ಕರ್ಫ್ಯೂ ಜಾರಿ: ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಪಂಕಜ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮುರುಗನ್ ಆಗಮಿಸಿ, ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಬಹಳ ಹೊತ್ತಿನವರೆಗೆ ಫಲ ಕಾಣಲಿಲ್ಲ. ತಕ್ಷಣ ಉದ್ರಿಕ್ತರನ್ನು ಚದರಿಸಲು ಪೊಲೀಸರು ಅಶ್ರುವಾಯು ಷೆಲ್ ಸಿಡಿಸಿ, ಲಾಠಿ ಪ್ರಹಾರ ಮತ್ತು ಗೋಲಿಬಾರ್ ನಡೆಸಿದರು. ಇಷ್ಟಕ್ಕೂ ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಜಿಲ್ಲಾ ಧಿ ಕಾರಿ ನಗರದಾದ್ಯಂತ ಬುಧವಾರದ ವರೆಗೆ ಕರ್ಫ್ಯೂ ಆದೇಶ ಜಾರಿಗೊಳಿಸಿದ್ದಾರೆ.
ಫ್ಲೆಕ್ಸ್ ಸುಟ್ಟರು: ಮಾರ್ಚ್ 7ರಂದು ನಗರದಲ್ಲಿ ಹಮ್ಮಿಕೊಂಡಿರುವ ಪ್ರಾಂತೀಯ ಬಜರಂಗದಳದ ಸಮ್ಮೇಳನದ ಅಂಗವಾಗಿ ನಗರದ ಅಮೀರ್ ಅಹಮದ್ ವೃತ್ತ ಮತ್ತು ಶಿವಪ್ಪನಾಯಕ ವೃತ್ತಗಳಲ್ಲಿ ಹಾಕಿದ್ದ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಸುಟ್ಟುಹಾಕಿದರು.ಪತ್ರಿಕಾ ಕಚೇರಿ ಮೇಲೆ ದಾಳಿ: ಉದ್ವಿಗ್ನತೆಗೆ ಕಾರಣವಾದ ಲೇಖನವನ್ನು ಪ್ರಕಟಿಸದ ಪತ್ರಿಕೆ ಕಚೇರಿಯೊಂದರ (ಪ್ರಜಾವಾಣಿ ಅಲ್ಲ) ಮೇಲೂ ದಾಳಿ ನಡೆಸಿದ ಉದ್ರಿಕ್ತರು, ಆಕ್ರೋಶ ಭರಿತ ಘೋಷಣೆ ಕೂಗಿ, ಪತ್ರಿಕಾ ಕಚೇರಿಯ ಗ್ಲಾಸ್ಗಳನ್ನು ಒಡೆದು ಹಾಕಿದ್ದಾರೆ. ಅಲ್ಲಿದ್ದ ಎರಡು ಬೈಕ್ಗಳನ್ನು ಜಖಂಗೊಳಿಸಿದ್ದಾರೆ.
ಪೆಟ್ರೋಲ್ ಬಾಂಬ್: ಗಾಂಧಿ ಬಜಾರ್ನ ಎಸ್ಟಿಡಿ ಬೂತ್ವೊಂದರ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಸಹ್ಯಾದ್ರಿ ಕಾಲೇಜು ಬೈಪಾಸ್ ರಸ್ತೆಯಲ್ಲಿ ಹಣ್ಣಿನ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದರಿಂದ ಅಲ್ಲಿಯೂ ಪರಿಸ್ಥಿತಿ ಹಿಂಸಾ ಸ್ವರೂಪ ಪಡೆಯಿತು.
ಕೋಮು ಸ್ವರೂಪ: ಸಂಜೆ ನಂತರ ಘಟನೆ ಕೋಮು ಘರ್ಷಣೆ ಸ್ವರೂಪ ಪಡೆದುಕೊಂಡಿತು. ಹಿಂದೂ ಪರ ಸಂಘಟನೆ ಹೆಸರಿನಲ್ಲಿ ಮುಸ್ಲಿಂ ಕೋಮಿನ ಅಂಗಡಿಗಳಿಗೆ ದಾಳಿ ನಡೆಸಲಾಯಿತು. ಮಹಾವೀರ ವೃತ್ತದಲ್ಲಿನ ಮಸೀದಿ ಮೇಲೆ ದಾಳಿ ನಡೆಸಲಾಯಿತು. ಅಕ್ಕಪಕ್ಕದಲ್ಲಿದ್ದ ಅಂಗಡಿಗಳ ಶಟರ್ಸ್ಗಳನ್ನು ಮುರಿದು ಅಂಗಡಿಗಳನ್ನು ಲೂಟಿ ಮಾಡಲಾಯಿತು.
ಕಂಡಲ್ಲಿ ಗುಂಡು ಆದೇಶ: ಗಲಭೆ ಹಿನ್ನೆಲೆಯಲ್ಲಿ ನಗರದಲ್ಲಿ ಕಿಡಿಗೇಡಿ ಕೃತ್ಯದಲ್ಲಿ ಪಾಲುಗೊಳ್ಳುವ ದುಷ್ಕರ್ಮಿಗಳಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ಎಚ್. ಎನ್. ಸತ್ಯನಾರಾಯಣರಾವ್ ತಿಳಿಸಿದ್ದಾರೆ.
ಗೋಪಿವೃತ್ತ, ಅಮೀರ್ ಅಹಮದ್ ವೃತ್ತ, ಮಹಾವೀರ ಸರ್ಕಲ್, ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಹಾಸನ ವರದಿ: ದಿಢಿ ೀರ್ ಪ್ರತಿಭಟನೆ, ಅಂಗಡಿಗಳ ಮೇಲೆ ದಾಳಿ, ಕಲ್ಲು ತೂರಾಟ, ಪೊಲೀಸರ ಲಾಠಿ ಪ್ರಹಾರ, ವಾಹನಗಳಿಗೆ ಬೆಂಕಿ, ದಾಳಿಗೆ ಪ್ರತಿದಾಳಿ, ಹಿಂಸಾಚಾರ, ನಿಷೇಧಾಜ್ಞೆ... ಕೇವಲ ಒಂದು ತಾಸಿನಲ್ಲಿ ನಡೆದ ಈ ಎಲ್ಲ ಘಟನೆಗೆ ನಗರ ತಲ್ಲಣಿಸಿತು. ಬೆಳಿಗ್ಗೆ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಹಿಂದೂಗಳು ಪ್ರತಿ ದಾಳಿ ನಡೆಸಿದರು. ಅಲ್ಲಿಂದ ಶುರುವಾದ ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳ ಪ್ರತ್ಯೇಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರ ದಾಳಿ, ಆಕ್ರೋಶವನ್ನು ತಡೆಯಲು ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರ ಪ್ರಯತ್ನ ವಿಫಲವಾಯಿತು.
ಪೊಲೀಸರು ಒಂದೆಡೆ ಪ್ರತಿಭಟನೆ ನಿಯಂತ್ರಿಸಿದರೆ, ಇನ್ನೊಂದೆಡೆ ಗಲಾಟೆ ಶುರುವಾಗುತ್ತಿತ್ತು. ಆಟೋ, ದ್ವಿಚಕ್ರ ವಾಹನ, ಅಂಗಡಿಗಳಿಗೆ ಬೆಂಕಿ ಹಚ್ಚಿ ಪೊಲೀಸರನ್ನು ಕೆರಳಿಸಿದರು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್ ಸಿಡಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ನಗರದ ತುಂಬೆಲ್ಲ ಹರಡಿಕೊಂಡ ಸಂಘರ್ಷದ ದಾಳಿಯನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಉಭಯ ಸಂಘಟನೆಗಳ ಕಾರ್ಯಕರ್ತರ ನಡುವಿನ ಪ್ರತಿಷ್ಠೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ನಗರದಲ್ಲಿ ಮೂರು ದಿನಗಳ ಕಾಲ 144ನೇ ಕಲಂನನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 7 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ 5 ಪೊಲೀಸರು ಸೇರಿದಂತೆ 13 ಜನ ಗಾಯಗೊಂಡಿದ್ದಾರೆ. ಪೊಲೀಸ್ ಜೀಪ್, 3 ಆಟೋ, 17 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರೆ, 43 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಪತ್ರಕರ್ತನ ಮೇಲೆ ಹಲ್ಲೆ: ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ರಕರ್ತರ ಆರೋಗ್ಯ ವಿಚಾರಣೆಗೆ ಆಗಮಿಸುತ್ತಿದ್ದ ರಾಜ್ಯಮಟ್ಟದ ಪತ್ರಿಕೆಯೊಂದರ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಮೇಲೂ ಕಿಡಿಗೇಡಿಗಳು ರಾತ್ರಿ 9 ಗಂಟೆ ಸುಮಾರಿಗೆ ಹಲ್ಲೆ ನಡೆಸಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಛಾಯಾಗ್ರಾಹಕ ಎಂ. ನಿಂಗನಗೌಡ ಅವರ ಆರೋಗ್ಯ ವಿಚಾರಣೆಗೆ ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಬಿಎಸ್ಎಲ್ಎನ್ ಕಚೇರಿ ಬಳಿ ನಂದನ್ ಅವರ ಹೊಟ್ಟೆ ಮೇಲೆ ಬಲವಾಗಿ ಗುದ್ದಿ, ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಅವರು ತುರ್ತು ಚಿಕಿತ್ಸೆ ಪಡೆದಿದ್ದಾರೆ.
25 ಜನರಿಗೆ ಗಾಯ: ನಗರದಾದ್ಯಂತ 144 ಸಕ್ಷನ್ ಜಾರಿಯಲ್ಲಿದ್ದು, ಅತಿ ಸೂಕ್ಷ್ಮ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ತಿಳಿಸಿದ್ದಾರೆ.ಗಾಂಧಿಬಜಾರ್, ಬಿ.ಎಚ್. ರಸ್ತೆ, ಅಮೀರ್ ಅಹಮದ್ ವೃತ್ತ, ಗೋಪಿವೃತ್ತದಲ್ಲಿ ಬುಧವಾರದವರೆಗೆ ಕಫ್ಯೂ ಜಾರಿಯಲ್ಲಿದ್ದು, ಸಾರ್ವಜನಿಕರು ಈ ಸ್ಥಳಗಳಲ್ಲಿ ಓಡಾಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಧ್ಯಾಹ್ನ ನಡೆದ ಘಟನೆಯಲ್ಲಿ 25 ಜನ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೌಜನ್ಯ: ಪ್ರಜಾವಾಣಿ



del.icio.us
Digg
Comments (1 posted):
Post your comment