
ಮೈದಾನದ ನಾಲ್ಕು ದಿಕ್ಕುಗಳಿಗೂ ಲೀಲಾಜಾಲವಾಗಿ ಚೆಂಡನ್ನು ಅಟ್ಟಿದ ಸಚಿನ್ಗೆ ಸರಿಸಾಟಿಯಾಗಿ ವಿಶ್ವದಲ್ಲಿ ಯಾವ ಬ್ಯಾಟ್ಸ್ಮನ್ ಇಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಈ ಹಿಂದೆ 1997ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸಯೀದ್ ಅನ್ವರ್ 194 ರನ್ ಗಳಿಸಿದ್ದು ಬ್ಯಾಟ್ಸ್ಮನ್ ಒಬ್ಬನಿಂದ ದಾಖಲಾದ ಗರಿಷ್ಠ ಮೊತ್ತವಾಗಿತ್ತು. ನಂತರ ಇದೇ ದಾಖಲೆಯನ್ನು ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್ ಕೊವೆಂಟ್ರಿ ಸರಿಗಟ್ಟಿದ್ದರು.
ಆದರೆ ಇದೀಗ ವಿಶ್ವವನ್ನೇ ನಡುಗಿಸುವ ರೀತಿಯಲ್ಲಿ ಬ್ಯಾಟ್ ಬೀಸಿದ ಸಚಿನ್ 147 ಎಸೆತಗಳಲ್ಲಿ 25 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರುಗಳ ನೆರವಿನಿಂದ ದಾಖಲೆಯ ದ್ವಿಶತಕ ಬಾರಿಸಿದರು.
ಮೊದಲ ಶತಕವನ್ನು 87 ಎಸತಗಳಲ್ಲಿ ದಾಖಲಿಸಿದ ಸಚಿನ್ ನಂತರದ ಶತಕವನ್ನು ಕೇವಲ 60 ಪೂರೈಸಿದರು.
ಇದು ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಬ್ಯಾಟ್ನಿಂದ ದಾಖಲಾದ ನಾಲ್ಕನೇ ಹಾಗೂ ಗ್ವಾಲಿಯರ್ ಮೈದಾನದಲ್ಲಿ ದಾಖಲಾದ ಎರಡನೇ ಶತಕವಾಗಿದೆ.
ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಅವರಿಗಿದು 93ನೇ ಶತಕದ ಸಂಭ್ರಮ. ಟೆಸ್ಟ್ನಲ್ಲಿ ಸಚಿನ್ 47 ಶತಕದ ದಾಖಲೆ ಹೊಂದಿದ್ದಾರೆ.
ಈ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಓಪನರ್ ವೀರೇಂದ್ರ ಸೆಹ್ವಾಗ್ (9) ವಿಕೆಟ್ ಆತಿಥೇಯರಿಗೆ ಆರಂಭದಲ್ಲೇ ನಷ್ಟವಾಗಿತ್ತು.
ಸಚಿನ್ಗೆ ಉತ್ತಮ ಬೆಂಬಲ ನೀಡಿದ ಕಾರ್ತಿಕ್ 85 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 79ರನ್ ಗಳಿಸಿದರು. ಸಚಿನ್-ಕಾರ್ತಿಕ್ ಜೋಡಿ ಮೂರನೇ ವಿಕೆಟ್ಗೆ 19.3 ಓವರುಗಳಲ್ಲಿ 194 ರನ್ನುಗಳ ಜೊತೆಯಾಟ ನೀಡಿದರು.
ನಂತರ ಬಂದ ಸ್ಫೋಟಕ ಬ್ಯಾಟ್ಸ್ಮನ್ ಯೂಸುಫ್ ಪಠಾಣ್ ಕೂಡಾ ಕೇವಲ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಬಿರುಸಿನ 36 ರನ್ ಗಳಿಸಿದರು.
ಆನಂತರ ಕ್ರೀಸಿಗಿಳಿದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
ಕೇವಲ 35 ಎಸೆತಗಳನ್ನು ಎದುರಿಸಿದ ಧೋನಿ ಏಳು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 68 ರನ್ ಗಳಿಸಿದರು.
ತಂಡದಲ್ಲಿ ಬದಲಾವಣೆಗಳಿಲ್ಲ...
ಜೈಪುರದಲ್ಲಿ ಮೊದಲ ಪಂದ್ಯದಲ್ಲಿ ಆಡಲಾದ ಅದೇ ತಂಡವನ್ನು ಟೀಮ್ ಇಂಡಿಯಾ ಉಳಿಸಿಕೊಂಡಿದೆ.
ಬೆನ್ನು ನೋವಿಗೆ ತುತ್ತಾಗಿದ್ದ ಆರಂಭಿಕ ವೀರೇಂದ್ರ ಸೆಹ್ವಾಗ್ ಆಡುವುದರ ಬಗ್ಗೆ ಅನುಮಾನ ಉಂಟಾಗಿದ್ದರೂ ಕೂಡಾ ಅಂತಿಮವಾಗಿ ಈ ಸಂಶಯ ನಿವಾರಣೆಯಾಗಿದ್ದು, ಫಿಟ್ ಎಂದು ಘೋಷಿಸಲಾಗಿದೆ.
ಅದೇ ರೀತಿ ಮೊದಲ ಪಂದ್ಯದಲ್ಲಿ ಸಾಕಾಷ್ಟು ದಂಡಿಸಿಕೊಂಡಿದ್ದ ಕೇರಳ ವೇಗಿ ಎಸ್. ಶ್ರೀಶಾಂತ್ರನ್ನು ಕೂಡಾ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಖಚಿತಪಡಿಸಿದ್ದಾರೆ.
ಮತ್ತೊಂದೆಡೆ ಪ್ರವಾಸಿಗರ ತಂಡದಲ್ಲಿ ಮೂರು ಬದಲಾವಣೆ ತರಲಾಗಿದ್ದು, ಲೂಟ್ಸ್ ಬೋಸ್ಮನ್, ಆಲ್ಬಿ ಮೊರ್ಕೆಲ್ ಮತ್ತು ಜೋಹಾನ್ ಬೋಥಾ ಸ್ಥಾನದಲ್ಲಿ ಹಾಶೀಮ್ ಆಮ್ಲಾ, ಜೆ.ಪಿ ಡ್ಯುಮಿನಿ ಮತ್ತು ವಾನ್ ಡೆರ್ ಮೆರ್ವೆ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಏಕದಿನ ಸರಣಿಗಿಂತಲೂ ಮೊದಲು ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಮ್ಲಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಮೊದಲ ಏಕದಿನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದ ಅವರು ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್ ಪಡೆಗೆ ಬಲತುಂಬಲಿದ್ದಾರೆ.
ಜೈಪುರದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಭಾರತ ಒಂದು ರನ್ನಿನಿಂದ ರೋಚಕವಾಗಿ ಗೆದ್ದುಕೊಂಡಿತ್ತು.
ಧೋನಿ ಅದೃಷ್ಟದಾಟ...
ಕಳೆದ 16 ಪಂದ್ಯಗಳಲ್ಲಿ ಧೋನಿಗಿದು ನಾಲ್ಕನೇ ಬಾರಿ ಟಾಸ್ ಒಲಿದು ಬಂದಿದೆ. ಕಳೆದ ಆರು ಪಂದ್ಯಗಳಲ್ಲಿ ನಿರಂತರ ಟಾಸ್ ಕಳೆದುಕೊಂಡಿದ್ದ ಮಹಿ ಈ ಪಂದ್ಯದಲ್ಲಿ ಟಾಸ್ ಗೆಲ್ಲಲು ಸಫಲರಾಗಿದ್ದು, ಸರಣಿ ವಶಪಡಿಕೊಳ್ಳಲು ಸಾಧ್ಯವಾಗಬಹುದೇ ಎಂಬುದು ಕಾದು ನೋಡಬೇಕಾಗಿದೆ.
ಆಡುವ ಬಳಗ:
ಭಾರತ: ಎಂ.ಎಸ್. ಧೋನಿ (ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯೂಸುಫ್ ಪಠಾಣ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಪ್ರವೀಣ್ ಕುಮಾರ್, ಆಶಿಶ್ ನೆಹ್ರಾ ಮತ್ತು ಎಸ್. ಶ್ರೀಶಾಂತ್.
ದಕ್ಷಿಣ ಆಫ್ರಿಕಾ: ಜಾಕ್ವಾಸ್ ಕಾಲಿಸ್ (ನಾಯಕ), ಹಾಶೀಮ್ ಆಮ್ಲಾ, ಹರ್ಷಲ್ ಗಿಬ್ಸ್, ಅಬ್ರಹಾಂ ಡಿ ವಿಲಿಯರ್ಸ್, ಜೆ.ಪಿ. ಡ್ಯಮಿನಿ, ಕೆವಿನ್ ಪೀಟರ್ಸನ್, ಮಾರ್ಕ್ ಬೌಷರ್, ವಾನ್ ಡೆರ್ ಮೆರ್ವೆ, ವೇಯ್ನ್ ಪಾರ್ನೆಲ್, ಡೇಲ್ ಸ್ಟೈನ್ ಮತ್ತು ಚಾರ್ಲ್ಸ್ ಲಾಂಗ್ವೆಲ್ಟ್.



del.icio.us
Digg
Comments (0 posted):
Post your comment