ಹೊಸದಿಲ್ಲಿ: ವಾಡಾ ವಿಧಿಗೆ ಬದ್ದರಾಗಲು ಕ್ರೀಡಾ ಸಚಿವರ ನಿವೇದನೆ
ಹೊಸದಿಲ್ಲಿ, ಆ.3: ವಿಶ್ವ ಉದ್ದೀಪನ ದ್ರವ್ಯ ನಿರೋಧಕ ಸಂಸ್ಥೆ (ವಾಡ)ಯ ‘ಸ್ಥಳ ಸೂಚಕ’ ವಿಧಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಳೆದಿರುವ ನಿಲುವಿಗೆ ಕ್ರೀಡಾ ಸಚಿವ ಎಂ.ಎಸ್. ಗಿಲ್ ಇಂದು ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟಿಗರು ಪ್ರಾಮಾಣಿಕತೆಯಿಂದ ಈ ವಿಧಿಗೆ ಬದ್ಧರಾಗಬೇಕು ಎಂದು ಅವರು ಹೇಳಿದ್ದಾರೆ.
ಆಟವಾಡದಿರುವ ಸಮಯದಲ್ಲಿ ಅನಿರೀಕ್ಷಿತ ಪರೀಕ್ಷೆಗಾಗಿ ತಾವು ಎಲ್ಲಿರುತ್ತೇವೆ ಎನ್ನುವುದನ್ನು ಆಟಗಾರರು ಮೂರು ತಿಂಗಳುಗಳ ಮಂಚಿತವಾಗಿ ತಿಳಿಸಬೇಕು ಎಂಬ ವಿಧಿ ಆತಗಾರರ ಖಾಸಗಿ ಜೀವನದ ಮೇಲೆ ಆಕ್ರಮಣ ಮಾಡುತ್ತದೆ ಎಂಬ ವಾದವನ್ನು ತಿರಸ್ಕರಿಸಿದ ಅವರು, ಹಾಗೇನೂ ಆಗುವುದಿಲ್ಲ ಎಂದರು.
“ವಾಡದ ಪರೀಕ್ಷೆಯನ್ನು ನಾವು ಸ್ವೀಕರಿಸಿದ್ದೇವೆ ಹಾಗೂ ನಾವು ಅದನ್ನು ಅನುಸರಿಸಿಕೊಂಡು ಹೋಗುತ್ತೇವೆ. ಈ ವ್ಯವಸ್ಥೆಯು ಯಾರ ವೈಯಕ್ತಿಕ ಜೀವನಕ್ಕೂ ತಗುಲಿಕೊಳ್ಳುವುದಿಲ್ಲ ಎನ್ನುವುದನ್ನು ಕ್ರೀಡಾಳುಗಳು ತಿಳಿದುಕೊಳ್ಳಬೇಕು" ಎಂದು ಇಲ್ಲಿ ನಡೆದ ರಾಜ್ಯ ಕ್ರೀಡಾ ಸಚಿವರುಗಳ ಸಮ್ಮೇಳನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲ್ ಹೇಳಿದರು. ಕ್ರಿಕೆಟಿಗರಿಂದ ಕೇಳಿ ಬಂದ ಬಂಡಾಯದ ದನಿಯಿಂದ ಕ್ರೀಡಾ ಸಚಿವರು ಅಚ್ಚರಿಗೊಂಡಂತೆ ಕಂಡುಬಂದರು. ಜಗತ್ತಿನಾದ್ಯಂತ ಹೆಚ್ಚಿನ ಕ್ರೀಡಾಪಟುಗಳು ಇದಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದರು. “ಎಲ್ಲ ಕ್ರೀಡಾಪಟುಗಳು ಇದಕ್ಕೆ ಸಹಿ ಹಾಕಬೇಕು ಹಾಗೂ ಸಂತೋಷದಿಂದ ಅನುಸರಿಸಬೇಕು. ಎಷ್ಟೋ ಸಂಖ್ಯೆಯ ಕ್ರೀಡಾ ಫೆಡರೇಶನ್ಗಳು ಮತ್ತು ಕ್ರೀಡಾಳುಗಳು ವಾಡದ ಈ ವಿಧಿಯನ್ನುಅನುಸರಿಸಿಕೊಂಡು ಬರುತ್ತಿದ್ದಾರೆ" ಎಂದು ಗಿಲ್ ನುಡಿದರು. “ಸ್ಥಳ ಸೂಚಕ" ವಿಧಿಯು ಭಾರತೀಯ ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹೆಚ್ಚಿನ ಕ್ರಿಕೆಟಿಗರು ಈ ಷರತ್ತಿಗೆ ಸಹಿ ಹಾಕಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕ್ರಿಯಾ ಸಮಿತಿಯು ರವಿವಾರ ಮುಂಬೈಯಲ್ಲಿ ಸಭೆ ಸೇರಿತ್ತು.
ಆಟಗಾರರ ಪರವಾಗಿ ನಿಂತ ಸಭೆಯು ಈ ವಿಧಿಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಐಸಿಸಿಗೆ ತಿಳಿಸಿದೆ. ಸಭೆಯಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್ ಮತ್ತು ಯುವರಾಜ್ ಭಾಗವಹಿಸಿದ್ದರು. “ವಾಡ ಒಂದು ಉತ್ತಮ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಉದ್ದೀಪನ ದ್ರವ್ಯ ಮುಕ್ತ ಜಗತ್ತಿನ ನಿರ್ಮಾಣದ ಅದರ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು" ಎಂದು ಕ್ರೀಡಾ ಸಚಿವರು ಹೇಳಿದರು. “ಭಾರೀ ಪ್ರಯತ್ನಗಳ ಬಳಿಕ, ಕಳೆದ ವರ್ಷ ದಿಲ್ಲಿಯಲ್ಲಿ ವಾಡ ಮಾನ್ಯತೆ ಹೊಂದಿರುವ ರಾಷ್ಟ್ರೀಯ ಉದ್ದೀಪನ ದ್ರವ್ಯ ನಿರೋಧಕ ಪ್ರಯೋಗಾಲಯವನ್ನು ಸ್ಥಾಪಿಸಲು ಅನುಮತಿ ದೊರೆಯಿತು. ಸ್ವೀಡನ್ ಕೂಡ ಇಲ್ಲಿಗೆ ತನ್ನ ಆಟಗಾರರ ಆದರಿಗಳನ್ನು ಇಲ್ಲಿಗೆ ಪರೀಕ್ಷೆಗೆ ಕಳುಹಿಸುತ್ತಿದೆ. ಇದರ ಬಗ್ಗೆ ನಾವು ಹೆಮ್ಮೆ ಪಡಬೇಕು" ಎಂದು ಗಿಲ್ ಹೇಳಿದರು.
Rate this article



del.icio.us
Digg
Comments (0 posted):
Post your comment